ಕೇಶವನ ಕರಗಳಿಂದ ರೂಪು ತಳೆದ ಯಾದವ

ಕೇಶವನ ಕರಗಳಿಂದ ರೂಪು ತಳೆದ ಯಾದವ
ತೆರೆಯ ಮರೆಯ ಸಾಧಕರಿಗೆ ಅಮರಸ್ಫೂರ್ತಿಯಾದವ
ಧ್ಯೇಯಮೂರ್ತಿಯಾದವ … ಹರಸು ನಮ್ಮ ಬಾಂಧವ || ಪ ||

ಬಾಲ್ಯದಾ ದಿನಗಳಲ್ಲಿ ಮಧುರ ದನಿಯ ಗಾಯಕ
ಸಂಘಟನೆಯ ದೀಕ್ಷೆ ಧರಿಸಿ ಆದೆಯೊ ಘನಸಾಧಕ
ಧ್ಯೇಯಕಾಗಿ ದೇಹ ಸವೆಸಿದಂಥ ನಿನ್ನ ಜೀವನ
ಸಾರ್ಥಕತೆಯ ವೀರಗಾಥೆ ನಿನ್ನ ಜನುಮ ಪಾವನ || 1 ||

ಕಲ್ಲುಮುಳ್ಳು ವಿಘ್ನಕೋಟಿ ಎಲ್ಲ ಮೆಟ್ಟಿ ಕ್ರಮಿಸಿದೆ
ಹಸಿವು ನಿದ್ದೆ ಪರಿವೆ ತೊರೆದು ನಾಡಿಗಾಗಿ ಶ್ರಮಿಸಿದೆ
ಶೂನ್ಯದಲ್ಲಿ ಸೃಷ್ಟಿಗೈದ ನಿನ್ನ ಕಾರ್ಯಶಕ್ತಿಗೆ
ಸಾಟಿಯಿಲ್ಲ ಸಂತ ನಿನ್ನ ಪ್ರಖರ ರಾಷ್ಟ್ರಭಕ್ತಿಗೆ || 2 ||

ವಾಮನನೊಲು ಗಾತ್ರ ನಿನದು ನಿಜದಿ ನೀ ತ್ರಿವಿಕ್ರಮ
ಸಕಲ ಜಗವೆ ಕಾರ್ಯಕ್ಷೇತ್ರ ಅಚಲ ಛಲ ಪರಾಕ್ರಮ
ನೀನು ನೆಟ್ಟ ಸಸಿಗಳಿಂದು ತರುಗಳಾಗಿ ಬೆಳೆದಿವೆ
ಹೂವು ಕಾಯಿ ಹಣ್ಣುಗಳಲಿ ನಿನ್ನ ನೆನಪ ತಂದಿವೆ || 3 ||

ವಂದಿಸುವೆವು ನಿನ್ನ ಅಡಿಗೆ ಸ್ಪಂದಿಸುವೆವು ನಿನ್ನ ನುಡಿಗೆ
ಸಾಗುತಿಹೆವು ವೇಗದಿಂದ ಅಭ್ಯುದಯದ ಗುರಿಯ ಕಡೆಗೆ
ನಿನ್ನ ಕನಸ ನನಸುಗೊಳಿಸೆ ಅರ್ಪಿಸಿಹೆವು ಸೌಧವ
ನಿನ್ನ ಸ್ಮೃತಿಯೆ ದಾರಿದೀಪ ಸಂಘರೂಪಿಯಾದವ || 4 ||

(ಮಾನನೀಯ ಯಾದವರಾವ್ ಜೋಷಿಯವರ ಸ್ಮರಣೆಯಲ್ಲಿ ರಚಿಸಿದ್ದು)

Leave a Reply

Your email address will not be published. Required fields are marked *