ಎಂಥ ಸುಮಧುರ ಬಂಧನ

ಎಂಥ ಸುಮಧುರ ಬಂಧನ ಸಂಘಕಿಂದು ಬಂದೆನಾ
ನಾಡ ಕೀರ್ತಿಯ ಉಳಿಸಿ ಬೆಳೆಸಲು ಐಕ್ಯವೊಂದೇ ಸಾಧನಾ        || ಪ ||

ನಡೆಯಲಾರದೆ ತೆವಳುತಿದ್ದೆನು ನಡಿಗೆ ಕಲಿಸಿತು ಸಂಘವು
ನುಡಿಯಲಾರದೆ ತೊದಲುತಿದ್ದೆನು ನುಡಿಯ ಉಲಿಸಿತು ಸಂಘವು
ಪಡೆದೆ ಉನ್ನತ ಜ್ಞಾನ ಸದ್ಗುಣ ಲಭಿಸಿ ಸಜ್ಜನ ಸಂಗವು          || 1 ||

ಗುರಿಯ ಅರಿಯದೆ ತಿರುಗುತಿದ್ದೆನು ಮರೆತು ತನುವಿನ ಪರಿವೆಯ
ಗುರುವು ದೊರೆಯದೆ ಮರುಗುತಿದ್ದೆನು ಪಡೆದೆ ಸದ್ಗುರು ಭಗವೆಯ
ದಾರಿ ದೀಪದ ತೆರದಿ ಬೆಳಗಿಹ ವೀರಪುರುಷರ ಚರಿತೆಯ          || 2 ||

ಶುದ್ಧಶೀಲಕೆ ಬದ್ಧನಾಗಿ ಪ್ರಬುದ್ಧನಾಗಿ ಬೆಳೆದೆನು
ಬುದ್ಧಶಂಕರ ಮಧ್ವ ಬಸವರ ಅಂಶವನು ಮೈ ತಳೆದೆನು
ಜನುಮ ಜನುಮದ ಮೌಢ್ಯ ಭ್ರಾಂತಿಯ ಕಲುಷವೆಲ್ಲವ ತೊಳೆದೆನು || 3 ||

ದೇಶಕಾರ್ಯವೆ ಈಶ ಕಾರ್ಯವು ಎನುವ ತತ್ವವು ಶಾಶ್ವತ
ಪೂಜ್ಯ ಕೇಶವ ಪೂಜ್ಯ ಮಾಧವ ಚರಣವಿರಚಿತ ಸತ್ಪಥ
ನಾಶವಾಯಿತು ಮೋಹಪಾಶವು ಮಾತೆಗೆಲ್ಲ ಸಮರ್ಪಿತ          || 4 ||

Leave a Reply

Your email address will not be published. Required fields are marked *